ಅಬ್ಬಬ್ಬಾ. ಕೊರೊನಾ. ಯಾಕ್ ಕೇಳ್ತೀರಾ ಈ ಹೆಮ್ಮಾರಿ ಕಥೆನಾ(?) ಕೊರೊನಾ ವೈರಸ್ ಅಂದರೆ ಜನ ಕನಸಿನಲ್ಲೂ ಬೆಚ್ಚಿ ಬೀಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ರುದ್ರನರ್ತನ ಮಾಡ್ತಿದೆ. ಬೆಂಗಳೂರಿನ ಕಥೆಯಂತೂ ಹೇಳೋದೇ ಬೇಡ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೊರೊನಾ ಅಂದ್ರೆ, ಒಂದೆರಡು ಏರಿಯಾಗಳು ನೆನಪಾಗುತ್ತಿದ್ವು. ಈಗ ನಗರದ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸ್ತಿದೆ. ಸೆಲೆಬ್ರೆಟಿಗಳ ಮನೆ ಸುತ್ತಾಮುತ್ತಾ ಪಾಸಿಟಿವ್ ಪ್ರಕರಣಗಳು ವರದಿಯಾಗ್ತಿದ್ದು, ಆತಂಕ ಹೆಚ್ಚುವಂತಾಗಿದೆ.
ಖ್ಯಾತ ಕ್ರೀಡಾಪಟುಗಳನ್ನ ಕೂಡ ಕೊರೊನಾ ಬಿಡ್ತಿಲ್ಲ. ಇದೀಗ ಸಿನಿಮಾ ಸೆಲೆಬ್ರಿಟಿಗಳ ಮನೆವರೆಗೂ ಕೊರೊನಾ ಎಂಟ್ರಿ ಕೊಟ್ಟಿದೆ. ಕಿಚ್ಚ ಸುದೀಪ್ ಅವರ ಜೆ. ಪಿ ನಗರದ ನಿವಾಸದ ಪಕ್ಕದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದು ಸಹಜವಾಗಿಯೇ ಸುದೀಪ್ ಕುಟುಂಬ ಸದಸ್ಯರನ್ನ ಆತಂಕಕ್ಕೆ ದೂಡಿದೆ.
ಹೊಸಕೆರೆ ಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲೀ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದೇ ಅಪಾರ್ಟ್ಮೆಂಟ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಿಲ್ಲಿ ಲಲ್ಲಿ ಖ್ಯಾತಿಯ ನಟ ರವಿ ಶಂಕರ್ ಮತ್ತು ನಟಿ ಪೂಜಾ ಗಾಂಧಿ ವಾಸವಾಗಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮೀ ವಾಸವಾಗಿರುವ ಅಪಾರ್ಟ್ಮೆಂಟ್ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಒಂದಷ್ಟು ಗಾಳಿಸುದ್ದಿ ಹರಡಲು ಕಾರಣವಾಗಿತ್ತು. ವಿಜಯಲಕ್ಷ್ಮಿಯ ದರ್ಶನ್ ಅವರಿಗೂ ಕೊರೊನಾ ಪಾಸಿಟಿವ್ ಇದೆ ಅಂತ ಯಾರೋ ಬುಧವಾರ ಸಂಜೆ ಸುಳ್ಳು ಸುದ್ದಿ ಹಬ್ಬಿಸಿದ್ರು. ಕೂಡಲೇ ಈ ಬಗ್ಗೆ ಟ್ವೀಟ್ ಮಾಡಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ರು. 'ನನಗೆ ಕೊರೊನಾ ಬಂದಿದೆ ಅನ್ನೋದೆಲ್ಲ ಸುದ್ದಿ ಸುಳ್ಳು. ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಸುರಕ್ಷಿತವಾಗಿರಿ' ಅಂತ ಟ್ವಿಟ್ ಮಾಡಿದ್ದಾರೆ.
ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ ಗೌಡ ವಾಸವಾಗಿದ್ದಾರೆ. ಅವರ ಪ್ಲಾಟ್ನ ಎದುರು ಪ್ಲಾಟ್ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಷಯ ತಿಳಿದ ಸ್ನೇಹಿತರು ರವಿಶಂಕರ್ ಅವರಿಗೆ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ಅಪಾರ್ಟ್ಮೆಂಟ್ನಲ್ಲಿ ನನ್ನ ಎದುರುಗಡೆಯ ಮನೆಗೆ ವಕ್ಕರಿಸಿತು ಕರೋನಾ. ನನ್ನ ಮಕ್ಕಳಿರುವ ಮನೆಯನ್ನು ದೇವರೆ ಕಾಪಾಡಬೇಕು. ಎಚ್ಚರ ಸ್ನೇಹಿತರೆ ಎಚ್ಚರ. ನಾವೀಗ ನಮ್ಮನೆ ಬಾಗಿಲನ್ನು 14 ದಿನ ತೆಗೆಯುವಂತೆಯೆ ಇಲ್ಲಾ. ದಿಗ್ಬಂಧನ ಎಂದು ಬಟ ರವಿಶಂಕರ್ ಅವರು ಟ್ವಿಟ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಸುದೀಪ, ಗಣಪ, ಸೃಜನ್ ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದುಬಿಡು ಅಂದರು. ವಾವ್, ಇದಲ್ಲವೆ ಗೆಳೆತನ ಅಂದರೆ. ಹಾಗೆ ಕುಟುಂಬವನ್ನು ವಿಚಾರಿಸಿದ, ಸಂತೋಷ್ ಆನಂದ್ ರಾಮ್, ರಘುರಾಮ್, ರಾಜೇಶ್ ನಟರಂಗ, ಅಲಕನಂದ, ಚಂದ್ರ ಮಯೂರ, ಶ್ರೀಕಾಂತ್ ಹೆಬ್ಳೀಕರ್, ರಾಕಿ, ಸೌಂದರ್ಯ ಜಗದೀಶ್ ಎಲ್ಲರಿಗೂ ಧನ್ಯವಾದ ಎಂದು ನಟ ರವಿಶಂಕರ್ ಗೌಡ ಅವರು ತಮ್ಮ ಟ್ವಿಟರ್ ಖಾತೆ ಬರೆದುಕೊಂಡಿದ್ದಾರೆ.
ಹೀಗೆ ಕೊರೊನಾ ವೈರಸ್ ಸೆಲೆಬ್ರೆಟಿಗಳಿಗೂ ಶಾಕ್ ಕೊಟ್ಟಿದೆ. ಜಾತಿ- ಮತ, ವಯಸ್ಸು, ಅಂತಸ್ತು ಅನ್ನೋ ಭೇಧ ಇಲ್ಲದೇ ಕೊರೊನಾ ಎಲ್ಲರಿಗೂ ಕಂಟಕವಾಗಿ ಪರಿಣಮಿಸಿದೆ. ಶೂಟಿಂಗ್ ಇಲ್ಲದೇ ಮನೆಯಲ್ಲೇ ಕಾಲ ದೂಡುತ್ತಿರುವ ಸೆಲೆಬ್ರಿಟಿಗಳಿಗೂ ಈಗ ಕೊರೊನಾ ಆತಂಕ ತಂದಿದೆ. ಕೆಲ ಸಿನಿಮಾಗಳ ಶೂಟಿಂಗ್ಗೆ ಅನುಮತಿ ಸಿಕ್ಕಿದ್ರು, ಸದ್ಯಕ್ಕೆ ಸೆಟ್ಗೆ ಹೋಗೋದಕ್ಕೆ ಭಯ ಪಡುವಂತಾಗಿದೆ. ಇದೀಗ ನೆಮ್ಮದಿಯಾಗಿ ಮನೆಯಲ್ಲೂ ಇರೋದಕ್ಕೆ ಬಿಡದೇ ಕೊರೊನಾ ಕಾಟ ಕೊಡ್ತಿದೆ.